ಚಿತ್ತಾಲರ ಆಬೋಲಿನ ಕಥೆ
ಈಗ ತಾನೆ ಯಶವಂತ ಚಿತ್ತಾಲರ ಆಬೋಲೀನ ಎಂಬ ಕಥೆಯನ್ನು ಓದಿದೆ. ಮನಸ್ಸು ಖಿನ್ನವಾಗಿದೆ. ಖಾಲಿಯೂ ಆಗಿದೆ. ಚಿತ್ತಾಲರ ಅನೇಕ ಕಥೆಗಳಲ್ಲಿರುವಂತಹ ಖಾಲಿತನ ಇಲ್ಲಿಯೂ ಇದೆ. ಇಂತಹ ಕಥೆ ಬರೆದ ಚಿತ್ತಾಲರ ಮನಸ್ಸು ಅದೆಷ್ಟು ನಲುಗಿತ್ತೋ? ಅದೆಷ್ಟು ನಡುಗಿತ್ತೋ? ಒಂದೇ ಸಮನೆ ಜಡ್ಜಮೆಂಟಲ್ ಆಗಿ ಮನಸ್ಸು ಯೋಚಿಸುತ್ತದೆ.. ಚಿತ್ತಾಲರು ಚಿತ್ತಾಲರಾಗಲು ಕಾರಣವೇನು? ನಮ್ಮ ಅಸ್ತಿತ್ವದ ಬಗ್ಗೆ ಬದುಕಿಗಿರುವ ದಿವ್ಯ ನಿರ್ಲಕ್ಷ್ಯದ ಕುರಿತಾದ ಸ್ಪಷ್ಟವಾದ ಅರಿವು ಅವರಿಗೆ ಬರಲು ಕಾರಣವೇನು? ಬಾಲ್ಯವೋ? ವಾತಾವರಣವೋ? ಅನುಭವವೋ? ಸಕ್ಕರೆ ಕಾಹಿಲೆಯಂತೆಯೇ self-awareness ಎನ್ನುವುದೂ ಆನುವಂಶಿಕವೋ? ನೀವು ಆಬೋಲಿನ ಕಥೆಯನ್ನು ಓದದವರಾಗಿದ್ದು ಓದುವ ಮನಸ್ಸಿದ್ದವರಾದರೆ ಈ ಕೆಳಗಿನ ಒಂದು ಪ್ಯಾರಾವನ್ನು ಓದಬೇಡಿ. ಆಬೋಲಿನದ ಸಾರಾಂಶ ಕೊಡಲೇಬೇಕಾದ್ದರಿಂದ ನಿಮಗದು ಕಥೆಯ ತಿರುಳು ಬಿಟ್ಟುಕೊಟ್ಟಂತಾಗುತ್ತದೆ. ################ ಆಬೋಲಿನಳೆಂಬ ಹರೆಯದ ಮುಗ್ಧ ಹುಡುಗಿಗೆ ಮನವೇಲನೆಂಬ ದುಷ್ಟ ಮಧ್ಯವಯಸ್ಕ, ಚುಂಬನದಿಂದಲೇ ಸಂತಾನ ಸಾಧ್ಯವೆಂದು ನಂಬಿಸಿ, “ನಿನಗೆ ನಾನು ಎರಡು ತಿಂಗಳ ಹಿಂದೆ ಚುಂಬಿಸಿದ್ದೆನಲ್ಲ, ಹಾಗಾಗಿ ನೀನು ಎರಡು ತಿಂಗಳ ಬಸುರಿ” ಎಂದು ತಲೆ ತಿರುಗಿಸುತ್ತಾನೆ. ಇದನ್ನೇ ನಂಬುವ ಆಬೋಲಿನಳು ಊರಿನ ಮುಂದೆ ತಾನು ಬಸುರಿಯೆಂಬುದನ್ನು ಒಪ್ಪಿ ತನ್ನನ್ನು ಅತ್ಯಾಚಾರ ಮಾಡಿದವನನ್ನೇ ವರಿಸುತ್ತಾಳೆ [ಅವಳಿಗೆಲ್ಲಿ ಗೊತ್ತಿದೆ, ಚುಂಬನದಿಂದ ಸಂತಾನೋತ್ಪತ್ತಿ ಆಗದೆಂದು?]....